ದೊಡ್ಡಬಳ್ಳಾಪುರ, (ಮೇ.27): ತಾಲೂಕಿನಾಧ್ಯಂತ ಶಾಲೆಗಳ ಬಾಗಿಲನ್ನು ಮೇ 29 ರಿಂದ ತೆರೆಯಲಾಗುತ್ತಿದೆ. 2023-24 ರ ಶೈಕ್ಷಣಿಕ ವರ್ಷದ ಆರಂಭಕ್ಕೆ ಶಾಲೆಗಳು ಸಿದ್ದವಾಗುತ್ತಿದೆ. ಬಹುತೇಕ ಶಾಲೆಗಳು ಸಿದ್ದತೆ ಆರಂಭಿಸಿವೆ.
ಶಾಲೆಗೆ ಮಕ್ಕಳನ್ನು ಸಂಭ್ರಮದಿಂದ ಬರಮಾಡಿಕೊಳ್ಳಲು ಸಿದ್ದತೆ ಜೋರಾಗಿದ್ದು, ಈಗಾಗಲೇ ತಾಲೂಕು ಮಟ್ಟದಲ್ಲಿ ಸಭೆ ಕರೆದು ಶಾಲೆ ಆರಂಭ ಹಾಗೂ ದಾಖಲಾತಿ ಹೆಚ್ಚಳದ ಕುರಿತು ಸಭೆ ನಡೆಸಲಾಗಿದೆ. ಈ ಮೂಲಕ ಶೈಕ್ಷಣಿಕ ವರ್ಷಾರಂಭಕ್ಕೆ ದಿನಗಣನೆ ಆರಂಭವಾಗಿದೆ.
ಸರಿಸುಮಾರು 2 ತಿಂಗಳುಗಳ ಕಾಲ ಬೇಸಿಗೆ ರಜೆಯ ನಂತರ ಶಾಲೆಗಳು ಮರು ಆರಂಭವಾಗುತ್ತಿದೆ. ಶಿಕ್ಷಕರು, ವಿದ್ಯಾರ್ಥಿಗಳಲ್ಲಿ ಇದರಿಂದ ಸಂತಸ ಮೂಡಿದೆ. ಜತೆಗೆ ಶಾಲೆಗಳು ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ.
ಇಲಾಖೆಯಿಂದ ಶಾಲೆಗಳಿಗೆ ಈಗಾಗಲೇ ಪುಸ್ತಕ, ಹಾಲಿನ ಪುಡಿಗಳ ನೀಡಲಾಗಿದೆ. ಬಹುತೇಕ ಶಾಲೆಗಳು ಬಾಗಿಲು ತೆರೆಯಲು ಸಿದ್ದತೆ ಪೂರ್ಣಗೊಂಡಿದೆ.
ಪ್ರತಿ ವರ್ಷ ಶಾಲೆಗಳಿಗೆ ಮಕ್ಕಳನ್ನು ಕರೆತರಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಆದರೂ ಶಾಲೆಯಿಂದ ದೂರು ಉಳಿಯುವವರೂ ಇದ್ದೇ ಇರುತ್ತಾರೆ. ಇದಕ್ಕೆ ಅನೇಕ ಕಾರಣಗಳು ಕೂಡ ಇದೆ. ಆದಾಗಿಯೂ ಈ ಬಾರಿ ಕೂಡ ಶಾಲೆಗಳ ದಾಖಲಾತಿ ಹೆಚ್ಚಿಸಲು ಇಲಾಖೆ ಜೂನ್ 1 ರಿಂದ ದಾಖಲಾತಿ ಆಂದೋಲನ ಹಮ್ಮಿಕೊಳ್ಳುತ್ತಿದೆ. ಇದು ಒಂದು ತಿಂಗಳು ಕಾಲ ನಡೆಯಲಿದ್ದು ,ಶಾಲೆಗಳಿಗೆ ಮಕ್ಕಳ ಕರೆತರುವ ಪ್ರಯತ್ನವಾಗಲಿದೆ.
ಶಾಲಾ ಪ್ರಾರಂಭೋತ್ಸವದ ದಿನದಂದು ಎಲ್ಲ ಶಾಲೆಯವರು ಶಾಲಾ ಆವರಣ ಮತ್ತು ಕೊಠಡಿಗಳಿಗೆ ಮಾವಿನ ತೋರಣ, ಬಾಳೆದಿಂಡಿನ ಅಲಂಕಾರ ಇರಲಿದೆ. ಶಾಲೆಯ ಅಂಗಳದಲ್ಲಿ ರಂಗೋಲಿಗಳು ಮಕ್ಕಳನ್ನು ಕೈಬೀಸಿ ಕರೆಯಲಿದ್ದು, ಮಕ್ಕಳಿಗೆ ಗುಲಾಬಿ, ಸಿಹಿ ನೀಡಿ ಶಾಲೆಗೆ ಭರಮಾಡಿಕೊಳ್ಳಲು ಸಿದ್ದತೆ ನಡೆದಿದೆ.
ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಈ ಬಾರಿ ಗುಣಾತ್ಮಕ ಶಿಕ್ಷಣ ನೀಡಲು ಸಿದ್ದತೆ ನಡೆದಿದೆ. ಈ ಬಾರಿಯೂ ಕೂಡ ಎಸ್ಸೆಸ್ಸೆಲ್ಸಿ ಸೇರಿದಂತೆ ಉತ್ತಮ ಫಲಿತಾಂಶ ಪಡೆಯಲು ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಪರಿಹಾರ ಬೋಧನೆ ಒಳ ಪಡಿಸಿ ಉತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಕ್ರಮವಹಿಸಲು ಪ್ರಯತ್ನಗಳು ಆಗಲಿದೆ.
ಶಿಕ್ಷಕರ ಕೊರತೆ: ಶಿಕ್ಷಣ ಇಲಾಖೆ ಇಷ್ಟೆಲ್ಲ ಸಿದ್ಧತೆ ನಡೆಸಿದರು ಶಿಕ್ಷಕರ ಕೊರತೆ ಪೋಷಕರನ್ನು ಆತಂಕಕ್ಕೆ ತಳ್ಳಿರುವ ಕಾರಣ, ಅನಿವಾರ್ಯವಾಗಿ ಖಾಸಗಿ ಶಾಲೆಗೆ ಮುಖ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.
ಪ್ರಸ್ತುತ ತಾಲೂಕಿನಲ್ಲಿ 180 ಶಿಕ್ಷಕರ ಕೊರತೆಯಿದ್ದು, ಸಾಸಲು ಹೋಬಳಿಯಲ್ಲಿ ಅತಿಹೆಚ್ಚು ಸುಮಾರು 49 ಶಿಕ್ಷಕರ ಕೊರತೆಯಿದೆ. ಈಗಾಗಲೇ ಶಿಕ್ಷಣ ಇಲಾಖೆ ಅತಿಥಿ ಶಿಕ್ಷಕರ ನೇಮಕಕ್ಕೆ ಅವಕಾಶ ನೀಡಿದ್ದು 120 ಶಿಕ್ಷಕರ ನೇಮಕ ಮಾಡಲು ಅನುಮತಿಗಾಗಿ ಇಲಾಖೆಗೆ ಮನವಿ ಸಲ್ಲಿಸಲಾಗಿದೆ.
ಕೋವಿಡ್ ನಂತರ ಆರಂಭವಾದ ಶಾಲೆಗಳ ವೇಳೆ ಸರ್ಕಾರಿ ಶಾಲೆಗಳಿಗೆ ಅತಿ ಹೆಚ್ಚು ದಾಖಲಾತಿ ಕಂಡು ಬಂದಿತ್ತು. ಆದರೆ ಕಳೆದ ವರ್ಷಕ್ಕಿಂತ ಈ ವರ್ಷ ಖಾಸಗಿ ಶಾಲೆಗಳಿಗೆ ಮುಖ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಪೋಷಕರು ನೀಡುವ ಕಾರಣ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ. ವಿಷಯಾಧಾರಿತ ಶಿಕ್ಷಕರ ನೇಮಕವಾಗದೆ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರ ನೇಮಕ ಮಾಡುವುದರಿಂದ ಇಂಗ್ಲೀಷ್, ಹಿಂದಿ, ದೈಹಿಕ ಶಿಕ್ಷಣಕ್ಕೆ ಬಹುತೇಕ ಶಾಲೆಗಳಲ್ಲಿ ಶಿಕ್ಷಕರು ದೊರಕದೆ ಶೈಕ್ಷಣಿಕ ಪ್ರಗತಿ ಸಾಧ್ಯವಾಗುತ್ತಿಲ್ಲ ಎಂಬುದಾಗಿದೆ.
ಇನ್ನು ಅತಿಥಿ ಶಿಕ್ಷಕರ ನೇಮಕ ಮಾಡಲು ಅವಕಾಶವಿದ್ದರು, ಕೆಲ ಮುಖ್ಯ ಶಿಕ್ಷಕರು ಅರ್ಹರನ್ನು ಆಯ್ಕೆ ಮಾಡದೆ ಬೇಕಾಬಿಟ್ಟಿಯಾಗಿ ಶಿಕ್ಷಕ ಹುದ್ದೆಗೆ ಅರ್ಹತೆ ಇರದವರನ್ನು ನೇಮಕ ಮಾಡುತ್ತಿರುವುದು ಪೋಷಕರ ಆಕ್ಷೇಪವಾಗಿದೆ. ಈ ನಿಟ್ಟಿನಲ್ಲಿ ಇಲಾಖೆ, SDMC ಹೆಚ್ಚಿನ ಗಮನ ಹರಿಸಬೇಕಿದೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….