ದೊಡ್ಡಬಳ್ಳಾಪುರ: ತಾಲೂಕಿನ ವಿವಿಧೆಡೆಗಳಲ್ಲಿ ಕ್ರಿಸ್ಮಸ್ ಹಬ್ಬವನ್ನು ಶ್ರದ್ಧಾ ಭಕ್ತಿ ಸಂಭ್ರಮಗಳಿಂದ ಆಚರಿಸಲಾಯಿತು.
ಚರ್ಚ್ ಗಳಲ್ಲಿ ವಿಶೇಷ ಪ್ರಾರ್ಥನೆಗಳು ನಡೆದವು. ಕ್ರೈಸ್ತ ಬಾಂಧವರು ಚರ್ಚ್ಗಳಲ್ಲಿ ಪ್ರಾರ್ಥನೆ ಸಲ್ಲಿಸಿ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ನಗರದ ಟಿ.ಬಿ.ವೃತ್ತದ ಬಳಿಯಿರುವ ಸಂತ ಪೇತ್ರರ ಚರ್ಚ್ನಲ್ಲಿ ಈವ್ ಅಂಗವಾಗಿ ಶುಕ್ರವಾರ ರಾತ್ರಿ ಬಲಿಪೂಜೆ ವಿಶೇಷ ಪ್ರಾರ್ಥನೆ ನಡೆಯಿತು.
ಚರ್ಚ್ ಗಳಲ್ಲಿ ಜಗತ್ತಿಗೆ ಬೆಳಕು ನೀಡುವ ಜೀಸಸ್ ಕ್ರಿಸ್ತನಿಗೆ ಸಾಂಕೇತಿಕವಾಗಿ ಮೇಣದ ಬತ್ತಿಗಳನ್ನು ಹಚ್ಚಲಾಗಿತ್ತು. ಹಾಗೂ ಕೆಲವರು ತಮ್ಮ ಹರಕೆಗಳನ್ನು ಪೂರ್ಣಗೊಳಿಸಲು ಸಹ ಮೇಣದ ಬತ್ತಿಗಳನ್ನು ಹಚ್ಚುವ ದೃಶ್ಯ ಸಾಮಾನ್ಯವಾಗಿತ್ತು.
ಸಂತ ಪೇತ್ರರ ಚರ್ಚ್ನಲ್ಲಿ ಫಾದರ್ ಆಂಟೋನಿ ಡಿಸೋಜಾ ವಿಶೇಷ ಪ್ರಾರ್ಥನೆ ಸಲ್ಲಿಸಿ, ಯೇಸು ಜನ್ಮ ವೃತ್ತಾಂತದ ಪ್ರವಚನ ನೀಡಿದರು. ಸಂತ ಪೇತ್ರರ ಚರ್ಚ್ನಲ್ಲಿ ಯೇಸು ಕ್ರಿಸ್ತನ ಜನನ ವೃತ್ತಾಂತ ತಿಳಿಸುವ ಬೊಂಬೆಗಳು ಹಾಗೂ ವಸ್ತು ಪ್ರದರ್ಶನ ಗಮನ ಸೆಳೆಯಿತು.
ನಗರದ ಮಾರುಕಟ್ಟೆ ಚೌಕ ಸಮೀಪದ ಸುಮಿತ್ರಾ ಸ್ಮಾರಕ ದೇವಾಲಯದಲ್ಲಿ ಫಾದರ್ ಡಾ.ಸಲಮಾನ್ ಥಾಮಸ್ ಪ್ರವಚನ ನೀಡಿದರು. ಯೇಸುವನ್ನು ಸ್ತುತಿಸುವ ಗೀತೆಗಳ ಗಾಯನ ನಡೆಯಿತು. ತಾಲೂಕಿನ ಪಾಲನಜೋಗಿಹಳ್ಳಿ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿರುವ ವಿವಿಧ ಚರ್ಚ್ ಗಳಲ್ಲಿ ಕ್ರಿಸ್ಮಸ್ ಆಚರಣೆ ನಡೆಯಿತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….