ದೊಡ್ಡಬಳ್ಳಾಪುರ: ರಾಜ್ಯ ರಾಜಕಾರಣದಲ್ಲಿ ಹಿಂದುಳಿದ ವರ್ಗಗಳ ನಾಯಕರೆಂದೇ ಹೆಸರು ಮಾಡಿರುವ ಆರ್.ಎಲ್.ಜಾಲಪ್ಪ ಅವರು ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಗ್ರಾಮದವರು.
1925 ಅಕ್ಟೋಬರ್ 19 ರಂದು ಜನಿಸಿದ್ದ ಆರ್.ಎಲ್.ಜಾಲಪ್ಪ ಅವರು ಬಿ.ಎ.ಪದವೀಧರರು. ಜಾಲಪ್ಪ ಅವರ ಸೇವೆಯನ್ನು ಗೌರವಿಸಿ ರಾಜ್ಯ ಸರ್ಕಾರ ದೇವರಾಜ ಅರಸು ಪ್ರಶಸ್ತಿ ನೀಡಿ ಗೌರವಿಸಿದೆ.
‘ಕಾಮೆಡ್ ಕೆ’ ಅಧ್ಯಕ್ಷರಾಗಿಯು ಹಲವಾರು ವರ್ಷಗಳಕಾಲ ಸೇವೆಸಲ್ಲಿಸಿದ್ದರು. ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತರುವಲ್ಲಿ ಆರ್.ಎಲ್.ಜಾಲಪ್ಪ ಅವರದ್ದು ಪ್ರಮುಖ ಪಾತ್ರ.
ಪ್ರಭಾವಿ ರಾಜಕಾರಣಿಯಾಗಿದ್ದ ಆರ್.ಎಲ್.ಜಾಲಪ್ಪ ಅವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಆರು ಬಾರಿ ಸ್ಪರ್ಧಿಸಿದ್ದರು. ಜನತಾಪಕ್ಷ, ಜನತಾದಳ ಮತ್ತು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಅವರು ಎರಡು ಬಾರಿ ಸೋಲು ಕಂಡರೆ, ನಾಲ್ಕು ಬಾರಿ ಗೆಲುವು ಸಾಧಿಸಿದ್ದರು.
1984ರಲ್ಲಿ ಜನತಾಪಕ್ಷದಿಂದ, 1991ರಲ್ಲಿ ಜನತಾದಳದಿಂದ ಸ್ಪರ್ಧಿಸಿ ಈ ಎರಡು ಚುನಾವಣೆಗಳಲ್ಲೂ ಸೋಲು ಅನುಭವಿಸಿದರು.1996ರಲ್ಲಿ ಜನತಾದಳದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ಆರ್.ಎಲ್.ಜಾಲಪ್ಪ ಅವರು ಅದೇ ಸಂದರ್ಭದಲ್ಲಿ ಪ್ರಧಾನ ಮಂತ್ರಿಯಾದ ಎಚ್.ಡಿ.ದೇವೇಗೌಡರ ಸಂಪುಟದಲ್ಲಿ ಜವಳಿ ಮಂತ್ರಿಯಾಗಿದ್ದರು. 1998ರಲ್ಲಿ ನಡೆದ ಲೋಕಸಭಾ ಚುನಾವಣೆಯ ವೇಳೆಗೆ ಅವರು ಜನತಾದಳ ತೊರೆದು ಕಾಂಗ್ರೆಸ್ ಪಕ್ಷ ಸೇರಿ ಮತ್ತೆ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ನಂತರ 1999 ಮತ್ತು 2004 ರಲ್ಲೂ ಸಹ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸಂಸದರಾಗಿ ಆಯ್ಕೆಯಾದರು.
ಆರ್.ಎಲ್.ಜಾಲಪ್ಪ ಕೇಂದ್ರ ಸರ್ಕಾರದಲ್ಲಿ 1996 ರಿಂದ 1998ರ ತನಕ ಜವಳಿ ಸಚಿವರಾಗಿದ್ದರು. 1998-99ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಹಣಕಾಸು ಸಮಿತಿ, ಸಂಸತ್ತಿನ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಸಮಿತಿ, ಕೃಷಿ ಸಚಿವಾಲಯ ಸಲಹಾ ಸಮಿತಿಗಳಿಗೆ ಸದಸ್ಯರಾಗಿದ್ದರು. 1999 – 2000ರಲ್ಲಿ ನಗರ ಮತ್ತು ಗ್ರಾಮೀಣ ಅಭಿವೃದ್ದಿ ಸಮಿತಿ ಸದಸ್ಯರಾಗಿದ್ದರು. 2006ರಲ್ಲಿ ಮಾನವ ಸಂಪನ್ಮೂಲ ಅಭಿವೃದ್ದಿ ಸಮಿತಿಯ ಸದಸ್ಯರಾಗಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….