ದೊಡ್ಡಬಳ್ಳಾಪುರ: ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಪರಿಷತ್ತಿನ ಶೀಘ್ರದಲ್ಲಿಯೇ ಘಟಕಗಳನ್ನು ವ್ಯವಸ್ಥಿತವಾಗಿ ರಚಿಸಲಾಗುವುದು ಕ್ರಿಯಾಯೋಜನೆ ರೂಪಿಸುವ ಮೂಲಕ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್.ಕೃಷ್ಣಪ್ಪ ಹೇಳಿದ್ದಾರೆ.
ನಗರದ ಕನ್ನಡ ಜಾಗೃತ ಭವನದಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ತಮ್ಮನ್ನು ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿ ಮಾತನಾಡಿದ ಅವರು, ಸಾಹಿತ್ಯ ಪರಿಷತ್ತಿನ ಚುನಾವಣೆಗೆ ಮತದಾರರ ಪಟ್ಟಿ ಸೇರಿದಂತೆ ಹಲವಾರು ತೊಡಕುಗಳಿದ್ದವು. ಪರಿಷತ್ತು ಸರ್ಕಾರದ ಅನುದಾನಿತ ಸಂಸ್ಥೆಯಾಗಿದ್ದರೂ ಸಹ ಇದು ಸಹಕಾರ ಸಂಘಗಳ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ ಸಹಕಾರ ಸಂಘಗಳ ನಿಯಮಗಳೇ ಇದಕ್ಕೂ ಅನ್ವಯಿಸುತ್ತದೆ. ಕಸಾಪ ಅಧ್ಯಕ್ಷರ ಅವ 3ವರ್ಷದಿಂದ 5 ವರ್ಷಕ್ಕೆ ಏರಿಸಿರುವುದು, ಪರಿಷತ್ತಿನ ಸದಸ್ಯತ್ವ ಶುಲ್ಕವನ್ನು 250 ರೂಗಳಿಗೆ ಇಳಿಸಿರುವುದು ಮೊದಲಾದ ವಿಚಾರಗಳು ಕೇಂದ್ರ ಕಸಾಪ ಅಧ್ಯಕ್ಷ ಡಾ.ಮಹೇಶ್ ಜ್ಯೋಷಿ ಅವರ ಸಭೆಯಲ್ಲಿ ಚರ್ಚಿತವಾಗಿವೆ.
ಸದಸ್ಯತ್ವ ಶುಲ್ಕವನ್ನು 250 ರೂಗಳಿಗೆ ಇಳಿಸುವ ಕುರಿತು ಅಧ್ಯಕ್ಷರು ಈಗಾಗಲೇ ಭರವಸೆ ನೀಡಿರುವ ಹಿನ್ನಲೆಯಲ್ಲಿ ಶುಲ್ಕ ಇಳಿಸುವುದು ಖಚಿತವಾಗಿದೆ. ಕಸಾಪದ ನೂತನ ನಿಬಂಧನೆಗಳನ್ವಯ ಜಿಲ್ಲಾ ಹಾಗೂ ತಾಲೂಕು ಘಟಕಕ್ಕೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದು. ನಮ್ಮ ಜಿಲ್ಲೆ ನಗರ ಹಾಗೂ ಗ್ರಾಮೀಣದ ಸೊಗಡು ಇರುವ ಜಿಲ್ಲೆಯಾದ್ದರಿಂದ ಎಲ್ಲಾ ವರ್ಗದ ಜನರ ಅಗತ್ಯ ಸಹಕಾರ ನೆರವು ಪಡೆದು ಪರಿಷತ್ತಿನ ಕಾರ್ಯ ಚಟುವಟಿಕೆಗಳನ್ನು ರೂಪಿಸಲಾಗುವುದು ಎಂದರು.
ಹಿರಿಯ ಕನ್ನಡ ಪರ ಹೋರಾಟಗಾರ ಜಿ.ಸತ್ಯನಾರಾಯಣ್ ಮಾತನಾಡಿ, ಜಿಲ್ಲೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸೂಕ್ತ ವ್ಯಕ್ತಿಯ ಹುಡುಕಾಟದಲ್ಲಿದ್ದಾಗ ನಮಗೆ ಬಿ.ಎನ್.ಕೃಷ್ಣಪ್ಪ ಅವರು ಕಂಡು ಬಂದರು. ಆದರೆ ದೊಡ್ಡಬಳ್ಳಾಪುರದಲ್ಲಿ ಅವರ ಪರವಾಗಿ ಬೂತ್ ಏಜೆಂಟ್ ಸಹ ನೇಮಕ ಮಾಡಲು ಆಗದೇ ಇರುವ ಪರಿಸ್ಥಿತಿ ಇತ್ತು. ಇಂತಹ ಸಂದರ್ಭದಲ್ಲಿ ದೊಡ್ಡಬಳ್ಳಾಪುರದ ಕಸಾಪ ಮತದಾರರು ಅವರನ್ನು ಬೆಂಬಲಿಸಿದ್ದಾರೆ. ಗಾಂಧಿ ಚೌಕಕ್ಕೇ ಸೀಮಿತವಾಗಿದ್ದ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳು ಎಲ್ಲಡೆ ನಡೆಯುವಂತಾಗಬೇಕು. ಬರೀ ಸಾಹಿತ್ಯಕ ಕಾರ್ಯಕ್ರಮಗಳಷ್ಟೇ ಅಲ್ಲದೇ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಕನ್ನಡದ ವಿಚಾರಕ್ಕೆ ದಕ್ಕೆ ಬಂದಾಗ ದನಿ ಎತ್ತುವುದು ಹಾಗೂ ಕನ್ನಡಪರ ಹೋರಾಟಗಳಲ್ಲಿ ಬಾಗವಹಿಸುವ ಮೂಲಕ ಪರಿಷತ್ತಿಗೆ ಚೈತನ್ಯ ನೀಡಬೇಕಿದ್ದು, ನಮ್ಮೆಲ್ಲರ ಸಹಕಾರ ನೂತನ ಅಧ್ಯಕ್ಷರಿಗೆ ಇದೆ ಎಂದರು.
ಕನ್ನಡ ಪಕ್ಷದ ಅಧ್ಯಕ್ಷ ಎಂ.ಸಂಜೀವ್ ನಾಯಕ್ ಮಾತನಾಡಿ, ಜಿಲ್ಲಾ ಕಸಾಪ ಚುಣಾವಣೆಗೆ ಸಮನ್ವಯ ಸಮಿತಿಯನ್ನು ರಚಿಸಲಾಗಿತ್ತು. ಆದರೆ ಅಧ್ಯಕ್ಷರ ಆಯ್ಕೆ ಬಗ್ಗೆ ಜಿಲ್ಲಾ ಕಸಾಪದ ನಿಕಟಪೂರ್ವ ಅಧ್ಯಕ್ಷರು ಯಾವುದೇ ಪ್ರತಿಕ್ರಿಯೆ ನೀಡದೇ ದೂರ ಉಳಿದು ಸ್ವತಂತ್ರ್ಯವಾಗಿ ಸ್ಪರ್ಧಿಸಿದರು. ಪರಿಷತ್ತಿನ ಶ್ರೇಯೋಭಿವೃದ್ದಿಗಾಗಿ ಕಸಾಪ ಮತದಾರರು ಕೃಷ್ಣಪ್ಪ ಅವರನ್ನು ಬೆಂಬಲಸಿದ್ದಾರೆ. ಅವರು ಅದನ್ನು ಉಳಿಸಿಕೊಂಡು ಹೆಚ್ಚಿನ ಕೆಲಸ ಮಾಡುವ ವಿಶ್ವಾಸವಿದೆ ಎಂದರು.
ಸಭೆಯಲ್ಲಿ ದೇವನಹಳ್ಳಿ ತಾಲೂಕು ಕಸಾಪ ಮಾಜಿ ಅಧ್ಯಕ್ಷ ನಂಜೇಗೌಡ, ಕಲಾವಿದ ರಬ್ಬನಹಳ್ಳಿ ಕೆಂಪಣ್ಣ, ಮುಖಂಡರಾದ ಕೆಂಪರಾಜ್ ಮೊದಲಾದವರು ಭಾಗವಹಿಸಿದ್ದರು.
ಸಭೆಯಲ್ಲಿ ಎಂಎಸ್ಜಿಪಿ ಘಟಕದ ವಿರುದ್ದ ಹೋರಾಟ ನಡೆಸುತ್ತಿರುವವರನ್ನು ಬೆಂಬಲಿಸಿ, ಪ್ರತಿಭಟನೆಯನ್ನು ಧರಣಿ ಹತ್ತಿಕ್ಕಿದ ಜಿಲ್ಲಾಡಳಿತದ ಕ್ರಮವನ್ನು ಖಂಡಿಸಲಾಯಿತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….