ಬೆಂ.ಗ್ರಾ.ಜಿಲ್ಲೆ: ಬೆಂಗಳೂರು ಗ್ರಾಮಾಂತರ ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಬಿ.ಎನ್.ಕೃಷ್ಣಪ್ಪ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ವಿಜಯಪುರ, ಹೊಸಕೋಟೆ, ನೆಲಮಂಗಲ, ದೊಡ್ಡಬಳ್ಳಾಪುರ, ಕನಸವಾಡಿ ಮತಗಟ್ಟೆಗಳಲ್ಲಿ ಭಾನುವಾರ ಸಾಹಿತ್ಯ ಪ್ರೇಮಿಗಳು ಉತ್ಸಾಹದಿಂದ ಸಾಲುಗಟ್ಟಿ ಮತದಾನ ಮಾಡಿದರು.
ಚುನಾವಣೆಯಲ್ಲಿ ಬಿ.ಎನ್.ಕೃಷ್ಣಪ್ಪ, ಮಹಾಲಿಂಗಯ್ಯ, ಲಕ್ಷ್ಮೀಶ್ರೀನಿವಾಸ್, ನಿಕಟ ಪೂರ್ವ ಅಧ್ಯಕ್ಷ ಚಿ.ಮಾ.ಸುಧಾಕರ್ ಕಣದಲ್ಲಿದ್ದರು.
ಕಳೆದ ಒಂದು ತಿಂಗಳಿಂದ ವ್ಯವಸ್ಥಿತವಾಗಿ ಚುನಾವಣಾ ಪ್ರಚಾರ, ಕಸಾಪದಲ್ಲಿ ಬದಲಾವಣೆ ಬಯಸಿದ್ದ ಸಮಾನ ಮನಸ್ಕರ ತಂಡದ ಅವಿರತ ಶ್ರಮ ಹಾಗೂ ಪ್ರಾಂಶುಪಾಲರಾಗಿ, ಸಾಹಿತಿಗಳಾಗಿ ಕರ್ತವ್ಯ ನಿರ್ವಹಿಸಿ, ಅಪಾರ ಪ್ರಮಾಣದ ಶಿಷ್ಯ ವೃಂದವನ್ನು ಹೊಂದಿದ್ದ ಕಾರಣ ಬಿ.ಎನ್.ಕೃಷ್ಣಪ್ಪ ಅವರು ಚುನಾಯಿತರಾಗಿದ್ದಾರೆ ಎನ್ನಲಾಗಿದೆ.
ಮರು ಆಯ್ಕೆ ಬಯಸಿದ್ದ ನಿಕಟ ಪೂರ್ವ ಅಧ್ಯಕ್ಷ ಚಿ.ಮಾ.ಸುಧಾಕರ್ ಅವರು, ಬಿ.ಎನ್.ಕೃಷ್ಣಪ್ಪ ಹಾಗೂ ಸಮಾನ ಮನಸ್ಕರ ಅಬ್ಬರದ ಪ್ರಚಾರದ ನಡುವೆ ಮಂಕಾಗಿದ್ದಾರೆ.
ಸ್ಪರ್ಧೆಯಲ್ಲಿ ನಾಲ್ಕು ಮಂದಿ ಇದ್ದರೂ, ಮೂರು ಮಂದಿ ಅಭ್ಯರ್ಥಿಗಳ ನಡುವೆ ಪ್ರಬಲ ಪೈಪೋಟಿಯಿತ್ತು. ಕೊನೆಗೂ ಇಬ್ಬರನ್ನು ಮಣಿಸುವಮೂಲಕ ಸಾಹಿತ್ಯ ಪರಿಷತ್ ನೂತನ ಸಾರಥಿಯಾಗಿ ಕೃಷ್ಣಪ್ಪ ಹೊರಹೊಮ್ಮಿದ್ದಾರೆ.
ಜಿಲ್ಲೆಯಲ್ಲಿ 7416 ಮತದಾರರ ಪೈಕಿ 4383 ಮಂದಿ ಮತಚಲಾವಣೆ ಮಾಡಿದ್ದಾರೆ. ಶೇ 58.49 ರಷ್ಟು ಮತದಾನವಾಗಿದೆ.
ದೊಡ್ಡಬಳ್ಳಾಪುರ: 1559, ದೇವನಹಳ್ಳಿ: 1730, ಹೊಸಕೋಟೆ: 510, ನೆಲಮಂಗಲ: 584 ಮಂದಿ ಮತ ಚಲಾಯಿಸಿದ್ದರು.
ನೂತನ ಅಧ್ಯಕ್ಷ ಬಿ.ಎನ್.ಕೃಷ್ಣಪ್ಪ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ಇದು ಕನ್ನಡಮ್ಮನ ಸೇವೆಗಾಗಿ ಸಿಕ್ಕಿರುವ ಅವಕಾಶ. ಪರಾಜಿತ ಅಭ್ಯರ್ಥಿಗಳನ್ನು ಕಡೆಗಣಿಸದೆ, ಅವರ ಸಲಹೆ ಸೂಚನೆ ಪಡೆದು, ಸಾಹಿತ್ಯ ಪರಿಷತ್ನ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಪ್ರತಿಯೊಂದು ತಾಲ್ಲೂಕಿನಲ್ಲೂ ಕನ್ನಡ ಸಾಹಿತ್ಯ ಪರಿಷತ್ತಿನ ಭವನಗಳ ನಿರ್ಮಾಣ ಸೇರಿದಂತೆ, ಚುನಾವಣಾ ಪೂರ್ವದಲ್ಲಿ ನಮ್ಮ ಪ್ರಣಾಳಿಕೆಯಲ್ಲಿ ಕೊಟ್ಟಿರುವ ಎಲ್ಲಾ ಭರವಸೆಗಳನ್ನು ಈಡೇರಿಸುವುದು ನಮ್ಮ ಮುಖ್ಯ ಗುರಿಯಾಗಿದೆ. ಗ್ರಾಮೀಣ ಯುವ ಸಾಹಿತಿಗಳಿಗೆ ಕಾವ್ಯಕಮ್ಮಟ ಆಯೋಜಿಸಿ, ರಾಜ್ಯಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ರಾಜ್ಯಾಧ್ಯಕ್ಷರ ಗಮನಸೆಳೆಯುತ್ತೇನೆ ಎಂದರು.
ನಿಕಟ ಪೂರ್ವ ಅಧ್ಯಕ್ಷ ಚಿ.ಮಾ.ಸುಧಾಕರ್ ಮಾತನಾಡಿ, ಚುನಾವಣೆಯಲ್ಲಿ ಸೋಲು ಕಂಡಿರುವುದಕ್ಕೆ ಬೇಸರವಿಲ್ಲ. ಸಾಹಿತ್ಯ ಪ್ರೇಮಿಗಳು ನೀಡಿರುವ ತೀರ್ಪನ್ನು ಸ್ವಾಗತಿಸುತ್ತೇನೆ. ಹಿಂದಿನ ಸಾಲಿನಲ್ಲಿ ನನಗೆ ನೀಡಿದ್ದ ಅವಕಾಶವನ್ನು ಸದುಪಯೋಗ ಮಾಡಿಕೊಂಡು ಉತ್ತಮವಾದ ಕಾರ್ಯಕ್ರಮಗಳನ್ನು ಮಾಡಿದ್ದೇವೆ. ನೂತನ ಜಿಲ್ಲಾಧ್ಯಕ್ಷರು, ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳನ್ನು ಉತ್ತಮವಾಗಿ ಮುಂದುವರೆಸಿಕೊಂಡು ಹೋಗಲಿದ್ದಾರೆ ಎಂದು ಅವರಿಗೆ ಶುಭಹಾರೈಸುತ್ತೇನೆ ಎಂದಿದ್ದಾರೆ.
ಕೃಷ್ಣಪ್ಪರ ಗೆಲುವಿನ ಹಿನ್ನಲೆಯಲ್ಲಿ ಸಮಾನ ಮನಸ್ಕರ ತಂಡ ದೊಡ್ಡಬಳ್ಳಾಪುರದಲ್ಲಿ ಸಂಭ್ರಮಾಚರಣೆ ಮಾಡಿತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……