ದೊಡ್ಡಬಳ್ಳಾಪುರ: ಮುಂದುವರೆದ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮ ದೇಶ ಇನ್ನೂ ಸಾಧಿಸಬೇಕಾಗಿರುವುದು ಬಹಳಷ್ಟಿದೆ. ಇಂದಿನ ಜಾಗತಿಕ ಯುಗದ ಗಂಭೀರ ಸವಾಲುಗಳನ್ನು ಎದುರಿಸುವ ಅನಿವಾರ್ಯ ಹಾಗೂ ಕಠಿಣ ಪರಿಸ್ಥಿತಿಯಲ್ಲಿ ನಾವಿದ್ದು, ಜ್ಞಾನಾರ್ಜನೆಗೆ ಹಾಗೂ ನಮ್ಮ ಆಸ್ಮಿತೆಗೆ ಒತ್ತು ನೀಡುವ ಮೂಲಕ ದೇಶದ ಜವಾಬ್ದಾರಿಯನ್ನು ಇಂದಿನ ಪೀಳಿಗೆ ವಹಿಸಿಕೊಳ್ಳಬೇಕಿದೆ ಎಂದು ಕೆಎಎಸ್ ಅಧಿಕಾರಿ ಹಾಗೂ ಲೇಖಕ ಡಾ.ವೆಂಕಟೇಶ್ ನೆಲ್ಲುಕುಂಟೆ ತಿಳಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ಕಾಲೇಜಿನಲ್ಲಿ ನಡೆದ ವಿವಿಧ ಸಮಿತಿಗಳ ಚಟುವಟಿಕೆಗಳ ಉದ್ಘಾಟನೆ ಹಾಗೂ 66 ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಡ ರಾಷ್ಟ್ರವಾಗಿದ್ದ ಚೀನಾ ಇಂದು ಜಗತ್ತಿನಲ್ಲಿಯೇ ಶ್ರೀಮಂತ ದೇಶಗಳಲ್ಲಿ ಮೊದಲನೆಯದಾಗಿದೆ. 1988ರಲ್ಲಿ ಚೀನಾದಲ್ಲಿನ ಜಿಡಿಪಿ 274 ಡಾಲರ್ ಇದ್ದದ್ದು, 2021ರ ವೇಳೆಗೆ 11,816 ಡಾಲರ್ ಆಗಿದೆ. ಆದರೆ ಭಾರತದ ಜಿಡಿಪಿ 1988ರಲ್ಲಿ 353 ಡಾಲರ್ ಇದ್ದದ್ದು, 2021ರವೇಳೆಗೆ 1877 ಡಾಲರ್ ಆಗಿದೆ. ಬಾಂಗ್ಲಾದೇಶದ್ದು ಪ್ರಸ್ತುತ 1888 ಡಾಲರ್ ಇದ್ದು, ನಮ್ಮ ದೇಶಕ್ಕಿಂತ ಮುಂದಿದೆ. ಅಗತ್ಯವಿರುವ ಕಡೆಯಲ್ಲೆಲ್ಲಾ ಉದ್ಯೋಗವಕಾಶಗಳನ್ನು ಸೃಷ್ಟಿಸುವ ಮೂಲಕ ಚೀನಾ ತನ್ನದೇ ಆದ ಪಾರುಪತ್ಯವನ್ನು ಜಗತ್ತಿನೆಲ್ಲಡೆ ಸೃಷ್ಟಿಸುತ್ತಿದೆ. ನಮ್ಮ ದೇಶದಲ್ಲಿ ಪ್ರಸ್ತುತ ಪದವೀಧರರ ಸಂಖ್ಯೆ ಶೇ.6 ಇದ್ದು, 2030ರ ವೇಳಗೆ ಶೇ.30ರಷ್ಟು ಗುರಿ ಹೊಂದಲಾಗಿದೆ. ಆದರೆ ಪದವಿ ಎಂದರೆ ಬರೀ ಅಂಕಗಳಿಗೆ ಸೀಮಿತವಾಗುವುದಲ್ಲ. ಯೂರೋಪ್, ಜರ್ಮನಿ ಮೊದಲಾದ ದೇಶಗಳಲ್ಲಿ ಕೌಶಲ್ಯಕ್ಕೆ ಒತ್ತು ನೀಡಲಾಗುತ್ತಿದೆ. ಇಲ್ಲಿ ವಿಜ್ಞಾನ, ಕಲೆ ವಾಣಿಜ್ಯ ಎನ್ನುವ ಬೇಧ ಇಲ್ಲ. ಚೀನಾದಲ್ಲಿ ರೈತರೂ ಕೂಡ ತಂತ್ರಾಂಶಗಳನ್ನು ಬರೆಯುತ್ತಾರೆ. ನಮ್ಮ ದೇಶದಲ್ಲಿ 1821ರ ಇತಿಹಾಸವನ್ನು ಇನ್ನೂ ಓದುತ್ತಿದ್ದು, ಇಂದಿನ ಅಗತ್ಯಗಳಿಗೆ ತಕ್ಕಂತೆ ಇತಿಹಾಸದಲ್ಲಿ ಜೆನಿಟಿಕ್ಸ್ ಮೊದಲಾಗಿ ಎಲ್ಲಾ ಅಂಶಗಳನ್ನು ಒಳಗೊಂಡ ಶಿಕ್ಷಣವನ್ನು ನೀಡಬೇಕಿದೆ ಎಂದರು.
ಆರ್ಥಿಕತೆಯ ಅರ್ಥವೇ ಬದಲು: ದೇಶದ ಪ್ರಜೆಗಳ ಸರಾಸರಿ ಆದಾಯ 6 ಸಾವಿರ ಇದ್ದರೂ, ಅದರಲ್ಲಿ ಶೇಕಡ 90ರಷ್ಟು ಖರ್ಚು ಮಾಡುತ್ತಿದ್ದು, ನಗರ ಕೇಂದ್ರೀಕೃತ ವ್ಯವಸ್ಥೆ, ಕೊಳ್ಳು ಬಾಕ ಸಂಸ್ಕೃತಿ, ಸಾಮ್ರಾಜ್ಯಶಾಹಿ ಧೋರಣೆಗಳು ಆರ್ಥಿಕ ಸ್ಥಿತಿಯನ್ನು ಹದಗೆಡಿಸುತ್ತಿವೆ. ಸರಬರಾಜಾಗುವ ಉತ್ಪನ್ನಗಳಿಗೆ ಮಾರುಕಟ್ಟೆಯ ಆಕರ್ಷಣೆ ಮಾಡುವ ಮೂಲಕ ಆರ್ಥಿಕತೆಯ ಅರ್ಥವೇ ಬದಲಾಗುತ್ತಿದೆ. ದಿನೋಪಯೋಗಿ ವಸ್ತುಗಳು ಮೊದಲುಗೊಂಡು ದೇಶಕ್ಕೆ ಇತರೆ ರಾಷ್ಟ್ರಗಳಿಗೆ ಆಮದಾಗುತ್ತಿರುವ ಪ್ರಮಾಣ ಶೇ.37 ಆಗಿದೆ. ದೇಶದ ಹೈನುಗಾರಿಕೆ ಗ್ರಾಮೀಣರ ಬದುಕಿನ ಮೇಲೂ ಸಹ ಇಂದು ಸ್ಪರ್ಧೆ ಏರ್ಪಡುತ್ತಿರುವುದು ಆತಂಕಕಾರಿ ಎಂದರು.
ಜ್ಞಾನ ಸಂಭ್ರಮ ಬೇಕು: ಇಷ್ಟೆಲ್ಲಾ ಆದರೂ ನಮ್ಮ ತನ್ನವನ್ನು ನಾವು ಉಳಿಸಿಕೊಳ್ಳದೇ ನಿರ್ಲಕ್ಷಿಸುತ್ತಿದ್ದೇವೆ, ಜ್ಞಾನಕ್ಕೆ ಆದ್ಯತೆ ಕೊಡುವುದು ಬಿಟ್ಟು ಅಂಕಗಳಿಗೆ ಆದ್ಯತೆ ನೀಡುತ್ತಿದ್ದೇವೆ. ಶಿಕ್ಷಣದಲ್ಲಿ ತತ್ವಜ್ಞಾನ, ತಾತ್ವಿಕ ಚಿಂತನೆಗಳಿಗೆ ಒತ್ತು ನೀಡಿ, ನಾಡು ನುಡಿಗಳ ಮೂಲಕ ನಮ್ಮ ವಿವೇಕ, ಅರಿವಿನ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ಜಾತಿ, ಧರ್ಮ, ತಾರತಮ್ಯಗಳನ್ನು ಮೀರಿದ ಸಮಾಜ ಕಟ್ಟಬೇಕು. ಕನ್ನಡದ ಮಕ್ಕಳು ಜಾಗತಿಕ ಅರಿವು ಹೆಚ್ಚಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಮಾರಂಭವನ್ನು ಕಾಲೇಜು ಅಭಿವೃದ್ದಿ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಟಿ.ವೆಂಕಟರಮಣಯ್ಯ ಉದ್ಘಾಟಿಸಿ, ವಿದ್ಯಾರ್ಥಿಗಳು ಶ್ರದ್ಧೆಯಿಂದ ಅಭ್ಯಾಸ ಮಾಡಿ ಗುರಿ ಮುಟ್ಟಬೇಕಿದೆ ಎಂದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಸಮಾರಂಭದಲ್ಲಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……