ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲೇ ಅತಿ ಹೆಚ್ಚು 3.7ರಷ್ಟು ಗುಣಮಟ್ಟದ ಹಾಲು ಸರಬರಾಜು ಮಾಡಿರುವ ಹೆಗ್ಗಳಿಕೆ ನಾಗಸಂದ್ರದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಸಲ್ಲುತ್ತದೆ ಎಂದು ಬಮೂಲ್ ದೊಡ್ಡಬಳ್ಳಾಪುರ ಶಿಬಿರ ಉಪವ್ಯವಸ್ಥಾಪಕ ಡಾ.ಎಲ್.ಬಿ.ನಾಗರಾಜು ಹೇಳಿದರು.
ಅವರು ತಾಲ್ಲೂಕಿನ ನಾಗಸಂದ್ರ ಹಾಲು ಉತ್ಪಾದಕರ ಸಹಕಾರ ಸಂಘದ 2020-21ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದರು.
ಹೈನುಗಾರಿಕೆಯಲ್ಲಿ ಸಾಕಷ್ಟು ಸುಧಾರಣೆಗಳು ಆಗಿವೆ. ಹೈನುಗಾರಿಕೆಯಲ್ಲಿ ವೈಜ್ಞಾನಿಕ ವಿಧಾನಗಳನ್ನು ಅನುಸರಿಸುವುದು ಅಗತ್ಯ. ಗುಣಮಟ್ಟದ ಹಾಲು ಉತ್ಪಾದನೆ ಮಾಡಿದರಷ್ಟೇ ಉತ್ತಮ ಬೆಲೆ ಪಡೆಯಲು ಸಾಧ್ಯ.ಹಾಲಿನ ಪರೀಕ್ಷೆಗೆ ಹಲವಾರು ಆಧುನಿಕ ಉಪಕರಣಗಳು ಬಂದಿರುವುದರಿಂದ ಗುಣಮಟ್ಟದ ಹಾಲನ್ನು ಗ್ರಾಹಕರು ಕಂಡುಕೊಳ್ಳುವುದು ಸುಲಭವಾಗಿದೆ. ಗುಣಮಟ್ಟದಲ್ಲಿ ನಂದಿನಿ ಬ್ರಾಂಡ್ ಹಾಲು ಹಾಗೂ ಹಾಲಿನ ಉತ್ಪನ್ನಗಳು ದೇಶದ ನಾನಾ ರಾಜ್ಯಗಳಲ್ಲಿ ಹೆಸರು ಮಾಡಿದೆ. ಈ ಹೆಸರನ್ನು ಉಳಿಸಿಕೊಂಡು ಹೋಗುವ ಹೊಣೆಗಾರಿಕೆ ಎಲ್ಲಾ ಹಾಲು ಉತ್ಪಾದಕರ ಮೇಲಿದೆ. ಗ್ರಾಮೀಣ ಭಾಗದ ಆರ್ಥಿಕತೆಯಲ್ಲಿ ಹೈನುಗಾರಿಕೆ ಮಹತ್ವದ ಪಾತ್ರ ವಹಿಸಿದೆ ಎಂದರು.
ಚಿತ್ರ ಸಾಹಿತಿ ಹಾಗೂ ಕೃಷಿಕ ರುದ್ರೇಶ್ ನಾಗಸಂದ್ರ ಮಾತನಾಡಿ, ಮುಂದಿನ ದಿನಗಳಲ್ಲಿ ಹೈನುಗಾರಿಕೆ ಸಂಕಷ್ಟಕ್ಕೆ ಸಿಲುಕುವ ಅಪಾಯಗಳಿವೆ. ವಿದೇಶಿ ಹಾಲು, ಹಾಲಿನ ಉತ್ಪನ್ನಗಳು ನಮ್ಮ ದೇಶದ ಮಾರುಕಟ್ಟೆಗೆ ಬರಲು ಮುಕ್ತ ಅವಕಾಶ ನೀಡಿದರೆ ಗ್ರಾಮೀಣ ಹೈನುಗಾರಿಕೆ ನಾಶವಾಗುವ ಅಪಾಯಗಳಿವೆ. ಈ ಬಗ್ಗೆ ರೈತರು ಸದಾ ಎಚ್ಚರದಿಂದ ಇರುವುದರ ಜೊತೆಗೆ ವಿದೇಶಿ ಸ್ಪರ್ಧೆಯನ್ನು ಎದುರಿಸಲು ರೈತರನ್ನು ಸರ್ಕಾರ ಸಿದ್ದಗೊಳಿಸಬೇಕಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ನಾಗಸಂದ್ರ ಎಂಪಿಸಿಎಸ್ ಅಧ್ಯಕ್ಷ ಎನ್.ಕಿರಣ್ ಮಾತನಾಡಿ, ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಹಾಲಿನ ಬೆಲೆ ಇಳಿಕೆಯಾದರು ಸಹ 2020-21ನೇ ಸಾಲಿನಲ್ಲಿ ಸಂಘವು ₹6 ಲಕ್ಷ ಲಾಭಗಳಿಸಿದೆ ಎಂದರು.
ಸಂಘಕ್ಕೆ ಹೆಚ್ಚು ಹಾಲು ಸರಬರಾಜು ಮಾಡಿದ ಸದಸ್ಯರಾದ ಎನ್.ಎಸ್.ಸೋಮಶೇಖರ್, ಎನ್.ಎಸ್.ನಟರಾಜ್,ಎನ್.ಬಿ.ಚಂದ್ರಶೇಖರ್, ಎನ್.ಪಿ.ಬಸವರಾಜ್ ಅವರಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು.
ಸಭೆಯಲ್ಲಿ ಬಮೂಲ್ ದೊಡ್ಡಬಳ್ಳಾಪುರ ಶಿಬಿರ ವಿಸ್ತರಣಾಧಿಕಾರಿ ಜಿ.ಮುನಿರಾಜು, ಸಂಘದ ಮುಖ್ಯಕಾರ್ಯನಿರ್ವಾಹಕ ಎಂ.ದೇವರಾಜ್, ಸಂಘದ ಉಪಾಧ್ಯಕ್ಷೆ ಶಿವಮ್ಮ ಹಾಗೂ ನಿರ್ದೇಶಕರು ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……