ದೊಡ್ಡಬಳ್ಳಾಪುರ: ರಾಮಾಯಣದಲ್ಲಿ ಬಿಂಬಿತವಾಗಿರುವ ಹಲವಾರು ಅಂಶಗಳು ಸಮಾಜದ ಏಳಿಗೆಗೆ ಪೂರಕವಾಗಿ ದಾರಿ ದೀಪವಾಗಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ತಿಳಿಸಿದರು.
ಪರಿಶಿಷ್ಟ ವರ್ಗಗಳ ಇಲಾಖೆ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿವತಿಯಿಂದ ನಗರದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಆಯೋಜಿಸದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವಾಲ್ಮೀಕಿ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ರಾಮಾಯಣ ರಚಿಸಿದ ವಾಲ್ಮೀಕಿಯವರ ಜೀವನ ಕುರಿತು ಅನೇಕ ರೀತಿಯ ಉಲ್ಲೇಖಗಳಿವೆ, ಆದರೆ ಅದರ ವಾಸ್ತವಿಕತೆಯನ್ನು ಅರಿಯಲು ಪ್ರಯತ್ನಿಸಬೇಕು ಎಂದರು. ರಾಮಾಯಣ ಮಹಾಕಾವ್ಯ ಪ್ರೀತಿ, ತ್ಯಾಗ, ಸಹನೆ, ಪ್ರಕೃತಿ ಸೌಂದರ್ಯ, ವಿರಹ ಹೀಗೆ ಹಲವಾರು ಅಂಶಗಳನ್ನು ಒಳಗೊಂಡಿದೆ.
ವಾಲ್ಮೀಕಿಯವರು ನಾರದರ ಮಾತಿಗೆ ಪ್ರೇರೇಪಿತರಾಗಿ ಸಾಂಸಾರಿಕ ಸಾಂಗತ್ಯವನು ತೊರೆದು, ತದೇಕಚಿತ್ತದಿಂದ ರಾಮ ಧ್ಯಾನವನ್ನು ಮಾಡಿ ಜ್ಞಾನವನ್ನು ಪಡೆದು ಇಂದಿಗೂ ಚಿರಸ್ಮರಣೀಯವಾಗಿರುವ ರಾಮಾಯಣ ಮಹಾಕಾವ್ಯವನ್ನು ರಚಿಸಿದರು. ಅದೇ ರೀತಿ ಪ್ರತಿಯೊಬ್ಬರೂ ಸಹ ಸನ್ಮಾರ್ಗದಲ್ಲಿ ನಡೆದು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂದು ಶಾಸಕರು ಹೇಳಿದರು.
ಉಪವಿಭಾಗಾಧಿಕಾರಿ ಅರುಳ್ ಕುಮಾರ್ ಮಾತನಾಡಿ, ಮಹರ್ಷಿ ವಾಲ್ಮೀಕಿ ರಚಿತ ರಾಮಾಯಣ ಅತ್ಯದ್ಭುತ ಕಾವ್ಯವಾಗಿದ್ದು, ಈ ಕಾವ್ಯ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ. ಮೂಲ ರಾಮಾಯಣದಿಂದ ಹಲವು ರಾಮಾಯಣಗಳು ರಚಿತವಾಗಿ ಪ್ರಶಸ್ತಿಗಳನ್ನು ಪಡೆದಿವೆ. ಜೀವನದ ಮೌಲ್ಯ, ಬದುಕಿನ ಸಿದ್ದಾಂತವನ್ನು ಈ ಮಹಾನ್ ಗ್ರಂಥದ ಮೂಲಕ ವಾಲ್ಮೀಕಿ ತಿಳಿಸಿಕೊಟ್ಟಿದ್ದಾರೆ ಎಂದರು.
ಡಿವೈಎಸ್ಪಿ ಟಿ.ರಂಗಪ್ಪ ಮಾತನಾಡಿ, ವಾಲ್ಮೀಕಿ ಜಯಂತಿ ಕೇವಲ ರಜೆಗೆ ಮಾತ್ರ ಸೀಮಿತವಾಗಬಾರದು. ಮಹರ್ಷಿ ವಾಲ್ಮೀಕಿ ಜೀವನ ಸಾರವನ್ನು ಇಂದಿನ ಯುವ ಜನಾಂಗಕ್ಕೆ ತಿಳಿಸಬೇಕಿದೆ. ರಾಮಾಯಣದಲ್ಲಿ ದುಷ್ಟರು ಮತ್ತು ಶ್ರೇಷ್ಠರ ಕುರಿತು ಉಲ್ಲೇಖಿಸಿದ್ದಾರೆ. ಕಾರಣ ದುಷ್ಟರಿಗೆ ಶಿಕ್ಷಿ, ಶ್ರೇಷ್ಟರಿಗೆ ರಕ್ಷೆ ಎಂಬುದು ಇದರ ಸಾರವಾಗಿದೆ. ಆದರೆ ಈ ಕಾವ್ಯವನ್ನು ವಯಸ್ಸಾದ ನಂತರ ಅಧ್ಯಯನಕ್ಕೆ ಮುಂದಾಗುತ್ತಿರುವುದು ವಿಪರ್ಯಾಸ. ರಾಮಯಣ ಮಹಾ ಕಾವ್ಯದ ನೀತಿ ಸಾರವನ್ನು ಚಿಕ್ಕವಯಸ್ಸಿನಲ್ಲೇ ಮಕ್ಕಳಿಗೆ ತಿಳಿಸಬೇಕಿದೆ ಅದರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಹಬ್ಬಹಬ್ಬಗಳ ಆಚರಣೆ ಸಮಿತಿ ಅಧ್ಯಕ್ಷ ತಹಶೀಲ್ದಾರ್ ಟಿ.ಎಸ್.ಶಿವರಾಜ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೃಷ್ಣಪ್ರಸಾದ್, ಸಹಾಯಕ ನಿರ್ದೆಶಕ ಸೋಮಶೇಖರ್, ಬಿಇಒ ಶುಭಮಂಗಳ, ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಪ್ರೇಮ್ ಕುಮಾರ್, ಉಪಾಧ್ಯಕ್ಷ ಕುಮಾರ್, ಸೇರಿದಂತೆ ವಾಲ್ಮೀಕಿ ಸಮುದಾಯದ ಮುಖಂಡರು, ವಿವಿಧ ಸಂಘಟನೆಯ ಮುಖಂಡರು ಹಾಜರಿದ್ದರು.
ಇದೇ ವೇಳೆ ವಾಲ್ಮೀಕಿ ಸಮುದಾಯದ 20 ಮಂದಿಗೆ ಹಕ್ಕು ಪತ್ರಗಳನ್ನು ವಿತರಣೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಲಾಯಿತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……