ದೊಡ್ಡಬಳ್ಳಾಪುರ: ನಗರಸಭಾ ಚುನಾವಣೆಗೆ ನಾಮ ಪತ್ರರ ಸಲ್ಲಿಕೆ ಮುಕ್ತಾಯವಾಗುತ್ತಿದ್ದಂತೆ ಆರೋಪ, ಪ್ರತ್ಯಾರೋಪಗಳ ಸರದಿ ಪ್ರಾರಂಭವಾಗಿದೆ.
ನಗರಸಭೆಯ ವಾರ್ಡ್ ಸಂಖ್ಯೆ 19ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಚ್.ಎಸ್.ಶಿವಶಂಕರ್ ಅವರು ನಾಮ ಪತ್ರಸಲ್ಲಿಕೆ ಸಮಯದಲ್ಲಿ ತಮ್ಮ ಮೇಲೆ ದಾಖಲಾಗಿರುವ ಕ್ರಿಮಿನಲ್ ಆರೋಪದ ಪ್ರಕರಣ ನಗರದ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ. ಆದರೆ ಇದನ್ನು ಪ್ರಮಾಣ ಪತ್ರದಲ್ಲಿ ಮುಚ್ಚಿಟ್ಟು ನಾಮಪತ್ರ ಸಲ್ಲಿಸಿದ್ದಾರೆ. ಇವರ ನಾಮ ಪತ್ರವನ್ನು ತಿರಸ್ಕರಿಸಬೇಕು ಎಂದು ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ ತಿಳಿಸಿದ್ದಾರೆ.
ಅವರು ಮಂಗಳವಾರ ನಗರದ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಚ್.ಎಸ್.ಶಿವಶಂಕರ್ ಅವರು ಬಿಜೆಪಿ ನಗರ ಘಟಕದ ಅಧ್ಯಕ್ಷರಾಗಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರೇ ನಾಮಪತ್ರ ಸಲ್ಲಿಕೆ ವೇಳೆ ಮತದಾರರಿಗೆ ಹಾಗೂ ಚುನಾವಣ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ. ಇದರ ವಿರುದ್ಧ ನಗರದ ಚುನಾವಣ ಅಧಿಕಾರಿಗಳಿಗೆ ಲಿಖಿತ ದೂರು ನೀಡಿ ನಾಮಪತ್ರ ತಿರಸ್ಕರಿಸುವಂತೆ ಮನವಿ ಮಾಡಲಾಗಿದೆ ಎಂದರು.
ಗೆಲ್ಲುವ ವಾರ್ಡ್ ಬಿಟ್ಟುಕೊಡಲಾಗದು: ಕಳೆದ ನಗರಸಭೆ ಹಾಗೂ ವಿಧಾನ ಸಭಾ ಚುನಾವಣೆಯಲ್ಲಿ ಕನ್ನಡ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲಾಗಿತ್ತು. ಆದರೆ ಈ ಬಾರಿ ಕನ್ನಡ ಪಕ್ಷದ ಮುಖಂಡರು ಐದು ವಾರ್ಡ್ಗಳನ್ನು ಬಿಟ್ಟುಕೊಡುವಂತೆ ಕೇಳಿದ್ದರು. ಆದರೆ ಕಾಂಗ್ರೆಸ್ ಪಕ್ಷದ ಸದಸ್ಯರು ಗೆಲ್ಲುವ ವಾರ್ಡ್ಗಳನ್ನೇ ಕೇಳಿದ್ದರಿಂದ ಮೈತ್ರಿ ಮುರಿದು ಬಿದ್ದಿದೆ ಎಂದು ಜಿ.ಲಕ್ಷ್ಮೀಪತಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಗರ ಬ್ಲಾಕ್ ಅಧ್ಯಕ್ಷ ಕೆ.ಪಿ.ಜಗನ್ನಾಥ್, ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಬೈರೇಗೌಡ, ಕಸಬಾ ಬ್ಲಾಕ್ ಅಧ್ಯಕ್ಷ ವೆಂಕಟೇಶ್, 19ನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ನಾಗೇಶ್, ಮುಖಂಡರಾದ ಜವಾಜಿ ರಾಜೇಶ್, ವಿನೋದ್ ಕುಮಾರ್ ಗೌಡ ಮತ್ತಿತರಿದ್ದರು.
ಕಾಂಗ್ರೆಸ್ಗೆ ಸೋಲುವ ಬೀತಿ: ನಗರಸಭೆಯ 19ನೇ ವಾರ್ಡ್ನಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸೋಲುವುದು ಖಚಿತವಾಗಿದೆ. ಹೀಗಾಗಿ ನಮ್ಮ ಮೇಲೆ ಸುಳ್ಳು ಆರೋಪ ಮಾಡುವ ಮೂಲಕ ಮತದಾರರಲ್ಲಿ ಗೊಂದಲ ಸೃಷ್ಠಿಸಲು ಮುಂದಾಗಿರುವುದು ಖಂಡನೀಯ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಹಾಗೂ 19ನೇ ವಾರ್ಡ್ ಅಭ್ಯರ್ಥಿ ಎಚ್.ಎಸ್.ಶಿವಶಂಕರ್ ತಿಳಿಸಿದ್ದಾರೆ.
ಅವರು ಈ ಬಗ್ಗೆ ಮಾಹಿತಿ ನೀಡಿ, ಕಾಂಗ್ರೆಸ್ ಪಕ್ಷದ ಮುಖಂಡರು ಮಾಡಿರುವ ಆರೋಪದ ದೂರಿನಲ್ಲಿ ನಾನು ಸಾಕ್ಷಿಯಾಗಿದ್ದೇನೆ ಹೊರತು ಆರೋಪಿಯಲ್ಲ. ಅಗತ್ಯ ದಾಖಲೆ ಚುನಾವಣೆ ಅಧಿಕಾರಿಗಳಿಗೆ ನೀಡಿರುವ ಹಿನ್ನೆಯಲ್ಲಿ ನಾಮಪತ್ರವನ್ನು ಪುರಸ್ಕರಿಸಲಾಗಿದೆ.
ನನ್ನ ವಿರುದ್ದ ಸುಳ್ಳು ಆರೋಪ ಮಾಡಿರುವವರ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…….