ದೊಡ್ಡಬಳ್ಳಾಪುರ: ಕರೊನಾ ಸಂದರ್ಭದಲ್ಲಿ ಜನರ ಪ್ರಾಣ ಉಳಿಸಲು ಶ್ರಮಿಸುವಲ್ಲಿ ಕೊವಿಡ್ ವಾರಿಯರ್ಸ್ ಸೇವೆ ಅಪಾರಾಗಿದೆ. ಆದರೆ ಕರೊನಾ ಸಂಕಷ್ಟಕ್ಕೆ ಸ್ಪಂದಿಸಲು ರಾಜ್ಯ ಸರ್ಕಾರಕ್ಕೆ ಕಣ್ಣು, ಕಿವಿ ಇಲ್ಲವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ತಾಲೂಕಿನ ದೊಡ್ಡಬೆಳವಂಗಲ ಹಾಗೂ ಕೊನಘಟ್ಟ ಗ್ರಾಮಗಳಲ್ಲಿ ನಡೆದ ಶಾಸಕ ಟಿ.ವೆಂಕಟರಮಣಯ್ಯ ನೇತೃತ್ವದಲ್ಲಿ ಮಧುರೆ, ದೊಡ್ಡಬೆಳವಂಗಲ, ಸಾಸಲು ಕಸಬಾ, ನಗರ ವ್ಯಾಪ್ತಿ, ತೂಬಗೆರೆ ಹೋಬಳಿ ವ್ಯಾಪ್ತಿಯ ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ, ಆಸ್ಪತ್ರೆ ದಾದಿಯರಿಗೆ ದಿನಸಿ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೋವಿಡ್ ಪರಿಹಾರ ಇದುವರೆಗೂ ಜನರಿಗೆ ತಲುಪಿಲ್ಲ. ಈ ಸರ್ಕಾರಕ್ಕೆ ಕಣ್ಣು, ಕಿವಿ ಇಲ್ಲವಾಗಿದೆ. ರೈತರು, ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಅನೇಕ ಜನ ಕರೊನಾದಿಂದ ಸಂಕಷ್ಟಕ್ಕೆ ಒಳಗಾಗಿದ್ದರು ಸ್ಪಂದಿಸಿಲ್ಲ. ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ, ಸರ್ಕಾರದಿಂದ ನೆರವು ದೊರೆತಿಲ್ಲ. 20 ಲಕ್ಷ ಕೋಟಿ ರೂ ಎಲ್ಲಿ ಎಂದು ನಿರ್ಮಲಾ ಸೀತರಾಮನ್ ಅವರನ್ನು ಕೇಳಿಬೇಕಿದೆ.
ವಾರಿಯರ್ಸ್ ಶ್ರಮಕ್ಕೆ ತಕ್ಕ ಪುರಸ್ಕಾರ ಈ ಸರ್ಕಾರ ನೀಡಿಲ್ಲ. ತಮಗೆ ಹುದ್ದೆ ನೀಡಿದ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದ್ದು ತಮ್ಮ ಸೇವೆಗೆ ಉತ್ತಮ ಸೌಲಭ್ಯ ದೊರಕಲಿದೆ ಎಂದು ಭರವಸೆ ನೀಡಿದ ಅವರು, ಕಾಂಗ್ರೆಸ್ ಶಾಸಕ ಟಿ.ವೆಂಕಟರಮಣಯ್ಯಅವರ ಕಾರ್ಯ ಪ್ರಶಂಸನೀಯವಾಗಿದೆ ಎಂದರು.
ರಾಜ್ಯದಲ್ಲಿ ಲಸಿಕೆಗೆ ಹಣ ಪಡೆದು ಹಾಕಲು ಸರ್ಕಾರ ಹೊರಟಿತ್ತು. ಲಸಿಕೆ ಸ್ಪಲ್ಪ ಮಟ್ಟಿನ ಹಣ ಕಾಂಗ್ರೆಸ್ ನೀಡಲಿದೆ, ಉಚಿತವಾಗಿ ಹಾಕಿ ಎಂದು ಒತ್ತಾಯಿಸಿದ ಫಲವಾಗಿ ಉಚಿತ ಲಸಿಕೆ ಸೀಗುತ್ತಿದೆ. ಆದರೂ ಲಸಿಕೆ ಕಾರ್ಯ ಇನ್ನೂ ಚುರುಕುಗೊಳ್ಳಬೇಕಿದೆ. ಪೆಟ್ರೋಲ್, ಡಿಸೆಲ್ ಅಡುಗೆ ಅನಿಲ, ಅಡುಗೆ ಎಣ್ಣೆಗಳ ಬೆಲೆಗಳು ದುಬಾರಿಯಾಗಿದ್ದು, ಜನ ಜೀವನವನ್ನು ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳು ಸಂಕಷ್ಟಕ್ಕೆ ಸಿಲುಕಿಸಿವೆ ಎಂದು ವಾಗ್ದಾಳಿ ನಡೆಸಿದರು.
ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಕೊವಿಡ್ ಸಂಕಷ್ಟದಲ್ಲಿರುವವರಿಗೆ ನೆರವಾಗುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಸಹಾಯಹಸ್ತ ಚಾಚುತ್ತಿದೆ. ಸ್ವಾತಂತ್ರ್ಯಾ ನಂತರ ದೇಶ ಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾಗ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ಸಮರ್ಪಕವಾಗಿ ನಿಭಾಯಿಸಿದೆ ಎಂದರು.
ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಕರೊನಾ ಸಂಕಷ್ಟ ಒಂದೂವರೆ ವರ್ಷಕ್ಕೂ ಹೆಚ್ಚು ಸಮಸ್ಯೆ ತಂದೊಡ್ಡಿದೆ. ಕರೊನಾ ಲಸಿಕೆ ವಿತರಣೆಯಲ್ಲಿ ಲೋಪವಾಗುತ್ತಿದ್ದು, ಸಾರ್ವಜನಿಕರಿಗೆ ತಲುಪುತ್ತಿಲ್ಲ. ಕರೊನಾ ವಾರಿಯರ್ಸ್ಗಳಿಗೆ ಸಂಬಳ ನೀಡಲಿಲ್ಲ ಆದರೂ ವಾರಿಯರ್ಸ್ಗಳು ತಮ್ಮ ಕರ್ತವ್ಯ ಮೆರೆದಿದ್ದಾರೆ. ಕೇಂದ್ರ ಸರ್ಕಾರದ ಆತ್ಮನಿರ್ಭರ ಎಂದರೆ ಕನ್ನಡದಲ್ಲಿ ನಿನ್ ಪಾಡ್ ನಿಂದೂ ಎಂಬುದಾಗಿದ್ದು, ಅದೇ ರೀತಿ ಜನರನ್ನು ಸರ್ಕಾರ ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಆರೋಪಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ, ಮಾಜಿ ಸಚಿವ ಟಿ.ಬಿ.ಜಯಚಂದ್ರ, ವಿಧಾನ ಪರಿಷತ್ ಸದಸ್ಯ ರವಿ, ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ, ತಾಪಂ ಮಾಜಿ ಅಧ್ಯಕ್ಷರಾದ ಡಿ.ಸಿ.ಶಶಿಧರ್, ನಾರಾಯಣಗೌಡ, ಎಪಿಎಂಸಿ ಅಧ್ಯಕ್ಷ ವಿಶ್ವನಾಥ್, ಟಿಎಪಿಎಂಸಿಎಸ್ ಅಧ್ಯಕ್ಷ ಸಿದ್ದರಾಮಣ್ಣ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಮುನಿಶಾಮಣ್ಣ, ತಾಲೂಕು ಅಧ್ಯಕ್ಷ ಬೈರೇಗೌಡ, ನಗರ ಘಟಕದ ಅಧ್ಯಕ್ಷ ಕೆ.ಪಿ.ಜಗನ್ನಾಥ್, ಬಮೂಲ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್, ದೇವನಹಳ್ಳಿ ಮಾಜಿ ಶಾಸಕ ವೆಂಕಟಸ್ವಾಮಿ, ಮುಖಂಡರಾದ ತಿ.ರಂಗರಾಜು,ಶ್ರೀನಿವಾಸ್, ಜನಾರ್ಧನ್, ಬಿ.ಹೆಚ್.ಕೆಂಪಣ್ಣ, ಸಂದೇಶ್, ವೆಂಕಟರಮಣಪ್ಪ ಮತ್ತಿತರರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..