ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಇರುವಕ್ಕಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗೃಹ ಕಚೇರಿ ಕೃಷ್ಣಾದಲ್ಲಿ ವರ್ಚುವಲ್ ಮೂಲಕ ಉದ್ಘಾಟಿಸಿದರು.
ಈ ನೂತನ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯಕ್ಕೆ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಎಂದು ನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಮಲೆನಾಡು, ಅರೆ ಮಲೆನಾಡು, ಬಯಲುಸೀಮೆ ಮತ್ತು ಕರಾವಳಿ ಪ್ರದೇಶಗಳಿಗೆ ವಿಶೇಷವಾದ ಹಾಗೂ ಕೃಷಿ, ತೋಟಗಾರಿಕೆ ಹಾಗೂ ಅರಣ್ಯ ಶಾಸ್ತ್ರ ಹೊಂದಿದ ಸಮಗ್ರ ವಿಶ್ವವಿದ್ಯಾಲಯವನ್ನು 2013 ರಲ್ಲಿ ಪ್ರಾರಂಭಿಸಿದರು. ಈ ವಿಶ್ವವಿದ್ಯಾಲಯವು ಸಿಎಂ ಬಿ.ಎಸ್ . ಯಡಿಯೂರಪ್ಪನವರ ಕನಸಿನ ಕೂಸಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಮುಖ್ಯಮಂತ್ರಿಗಳಾದ ಬಿ.ಎಸ್ . ಯಡಿಯೂರಪ್ಪನವರು ಈ ವಿಶ್ವವಿದ್ಯಾಲಯವನ್ನು 2013 ರಲ್ಲಿ ಹುಟ್ಟು ಹಾಕಿ ತಾವೇ ತಮ್ಮ ಅಮೃತ ಹಸ್ತದಿಂದ ಇಂದು ಸದರೀ ನೂತನ ವಿಶ್ವವಿದ್ಯಾಲಯದ ಆವರಣವನ್ನು ಸಾಗರ ತಾಲ್ಲೂಕಿನ ಇರುವಕ್ಕಿಯಲ್ಲಿ ಉದ್ಘಾಟನೆ ಮಾಡುತ್ತಿರುವುದು ರಾಜ್ಯದ ಅದರಲ್ಲಿಯೂ ವಿಶೇಷವಾಗಿ ಮಲೆನಾಡಿನ ರೈತರಿಗೆ ಒಂದು ವರದಾನವಾಗಿದೆಂದು ಬಿಸಿಪಿ ಅಭಿಪ್ರಾಯಪಟ್ಟರು.
ಈ ವಿಶ್ವವಿದ್ಯಾಲಯಕ್ಕೆ 787 ಎಕರೆ ಜಮೀನನ್ನು ನೀಡಿ 155 ಕೋಟಿ ರೂ.ಗಳನ್ನು ಮಂಜೂರು ಮಾಡಿ ಇರುವ ನೂತನ ಆವರಣ ಅಭಿವೃದ್ಧಿಗೆ ಸರ್ಕಾರವು ಆದೇಶ ಹೊರಡಿಸಿತ್ತು. ಇದರ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಉಡುಪಿ, ಕೊಡಗು ಮತ್ತು ಮಂಗಳೂರು ಸೇರಿ ಒಟ್ಟು 7 ಜಿಲ್ಲೆಗಳು ಸೇರುತ್ತವೆ. ಸರ್ಕಾರದ ಆದೇಶದಂತೆ ಇರುವ ಆವರಣದಲ್ಲಿ 4 ಲಕ್ಷ 95 ಸಾವಿರ ಚದುರ ಅಡಿ ಪ್ರದೇಶದಲ್ಲಿ ಆಡಳಿತ ಭವನ, ಬೆಳೆ ಉತ್ಪಾದನೆ ಮತ್ತು ಬೆಳೆ ಸಂರಕ್ಷಣಾ ವಿಭಾಗ, ಬೆಳೆ ಅಭಿವೃದ್ಧಿ ಮತ್ತು ಜೈವಿಕ ತಂತ್ರಜ್ಞಾನ ವಿಭಾಗ, ಸಮಾಜ ಮತ್ತು ಮೂಲ ವಿಜ್ಞಾನಗಳ ವಿಭಾಗ, ತೋಟಗಾರಿಕೆ ಮತ್ತು ಅರಣ್ಯ ವಿಭಾಗ, ಗ್ರಂಥಾಲಯ, ಕೊಳಚೆ ನೀರು ಶುದ್ದೀಕರಣ ಘಟಕ ಹಾಗೂ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ನಿಲಯಗಳನ್ನು ನೂತನವಾಗಿ ನಿರ್ಮಿಸಲಾಗಿದೆ .
ಇದೊಂದು ಸಮಗ್ರ ಕೃಷಿ ವಿಶ್ವವಿದ್ಯಾಲಯವಾಗಿದ್ದು, ಇಲ್ಲಿ ಹಂತ ಹಂತವಾಗಿ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕೃಷಿ, ತೋಟಗಾರಿಕೆ ಹಾಗೂ ಅರಣ್ಯ ವಿಭಾಗಗಳಲ್ಲಿ ಸ್ನಾತಕ, ಸ್ನಾತಕೋತ್ತರ ಮತ್ತು ಪಿ.ಹೆಚ್.ಡಿ. ಪದವಿಗಳನ್ನು ನೀಡಲು ಮೂಲ ಸಂಪನ್ಮೂಲಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಈ ವಿಶ್ವವಿದ್ಯಾಲಯದ ಅಡಿಯಲ್ಲಿ 4 ಪದವಿ ಕಾಲೇಜುಗಳು, 2 ಡಿಪ್ಲೊಮೋ ಕಾಲೇಜುಗಳು , 13 ಸಂಶೋಧನಾ ಕೇಂದ್ರಗಳು, 4 ಕೃಷಿ ವಿಜ್ಞಾನ ಕೇಂದ್ರಗಳು ಹಾಗೂ 2 ವಿಸ್ತರಣಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದೆ.
ವಿಶ್ವವಿದ್ಯಾಲಯವು ಭತ್ತದಲ್ಲಿ ಕೆ.ಪಿ.ಆರ್ -1 , ಕೆ.ಕೆ.ಪಿ -5 , ಐ.ಇ.ಟಿ -21179 , ಪ್ರಗತಿ , ಸಹ್ಯಾದ್ರಿ ಮೇಘ , ಸಹ್ಯಾದ್ರಿ ಪಂಚಮುಖಿ , ಸಹ್ಯಾದ್ರಿ ಕಾವೇರಿ ತಳಿಗಳನ್ನು ಹಾಗೂ ಅಡಿಕೆಯಲ್ಲಿ ಮೈದಾನ ಸ್ಥಳೀಯ ಮತ್ತು ಅಲಸಂದೆಯಲ್ಲಿ ಸಹ್ಯಾದ್ರಿ ಯುಕ್ತಿ ತಳಿಗಳನ್ನು ಅಭಿವೃದ್ಧಿ ಪಡಿಸಿದೆ.
ವಿಶ್ವವಿದ್ಯಾಲಯದ ಪ್ರಾರಂಭದಿಂದ 2019-20 ರವರೆಗೆ 389 ಟನ್ ಗುಣಮಟ್ಟದ ಬೀಜಗಳನ್ನು ಹಾಗೂ 39 ಲಕ್ಷ ಸಸಿಗಳನ್ನು ಉತ್ಪಾದಿಸಿ ರೈತರಿಗೆ ವಿತರಿಸಲಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..