ಬೆಂ.ಗ್ರಾ.ಜಿಲ್ಲೆ: ಹೋಮ್ ಐಸೋಲೇಷನಲ್ಲಿರುವ ಕೋವಿಡ್ ರೋಗಿಗಳಿಗೆ ತಡಮಾಡದೇ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡುವ ಮೂಲಕ ಪ್ರಾಥಮಿಕ ಹಂತದಲ್ಲೇ ರೋಗಿಗಳನ್ನು ಗುಣಮುಖರನ್ನಾಗಿಸುವುದರಿಂದ ಆಸ್ಪತ್ರೆಯ ಹಾಸಿಗೆ, ವೆಂಟಿಲೇಟರ್, ಆಕ್ಸಿಜನ್ಗಾಗಿ ಅಲೆದಾಟ ಹಾಗೂ ಯಾವುದೇ ರೀತಿಯ ಸಾವು ನೋವುಗಳು ಸಂಭವಿಸುವುದಿಲ್ಲ ಎಂದು ಕಂದಾಯ ಸಚಿವ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ಅಶೋಕ್ ಅವರು ತಿಳಿಸಿದರು.
ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಹೆಚ್ಚು ಸಾವು ಸಂಭವಿಸುತ್ತಿರುವ ಹಿನ್ನೆಲೆ, ಹಾಗೂ ಕೋವಿಡ್-19 ಸೋಂಕಿತರಿಗೆ ಸರಿಯಾದ ಆಹಾರ ನೀಡುತ್ತಿಲ್ಲ ಎಂಬ ದೂರು ಬಂದ ಹಿನ್ನೆಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿರುವ ಆಕಾಶ್ ಆಸ್ಪತ್ರೆಗೆ ಇಂದು ಸಚಿವ ಆರ್.ಅಶೋಕ್ ಅವರು ಭೇಟಿ ನೀಡಿ, ಪರಿಶೀಲಿಸಿ, ಮಾತನಾಡಿದರು.
ಪ್ರಾಥಮಿಕ ಕರೊನಾ ಸೋಂಕು ಗುಣಲಕ್ಷಣಗಳುಳ್ಳವರು, ಮನೆಯ ಪ್ರತ್ಯೇಕತೆಯಲ್ಲಿ ಇರುವವರಿಗೆ ವೈದ್ಯರ ಸಲಹೆ ಮೇರೆಗೆ 9 ರೀತಿಯ ಮಾತ್ರೆಗಳನ್ನು ನೀಡುವಂತೆ ಸಲಹೆ ನೀಡಿದ್ದು, ಕೋವಿಡ್ ನಿಯಮಗಳನ್ನು, ರೋಗವನ್ನು ತಡೆಗಟ್ಟುವ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವುದು, ಪ್ರತಿ ದಿನ ಬಿಸಿ ನೀರು ಕುಡಿಯುವುದು ಹೀಗೆ ಹತ್ತು ಹಲವು ಸಲಹೆ ಸೂಚನೆಗಳನ್ನು ಹೊಂದಿರುವ ಕರಪತ್ರಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಲು ಸಂಬಂಧಿಸಿದವರಿಗೆ ಸೂಚಿಸಲಾಗಿದೆ ಎಂದರು.
ಕೋವಿಡ್ ಸೋಂಕಿತರಿಗೆ ಊಟದಲ್ಲಿ ಯಾವುದೇ ರೀತಿಯ ಸಮಸ್ಯೆ, ಲೋಪದೋಷಗಳು ಉಂಟಾಗದಂತೆ, ಪೌಷ್ಟಿಕಯುಕ್ತ ಆಹಾರವನ್ನು ಸರಿಯಾದ ಸಮಯಕ್ಕೆ ನೀಡಲು ಸೂಚಿಸಿದರು.
ಕೇಂದ್ರ ಸರ್ಕಾರದ ಆದೇಶದ ಮೇರೆಗೆ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್-19 ಲಸಿಕೆ ನೀಡುವ ಅಭಿಯಾನಕ್ಕೆ ಮುಖ್ಯಮಂತ್ರಿಗಳು ಚಾಲನೆ ನೀಡಿದ್ದಾರೆ ಎಂದರಲ್ಲದೆ, ಮದುವೆ, ಮುಂಜಿ, ಊರಹಬ್ಬ, ಜಾತ್ರೆ, ಅಡ್ಡಪಲ್ಲಕ್ಕಿಗಳ ಆಚರಣೆ ನಿಷಿದ್ಧವಾಗಿದ್ದು, ಒಂದು ವೇಳೆ ಆಚರಿಸಿದರೆ ವಿಪತ್ತು ನಿರ್ವಹಣಾ ಕಾಯ್ದೆ 2005ರಡಿ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಕರೊನಾ ಎಂಬುದು ಸಾಂಕ್ರಾಮಿಕ ರೋಗವಾಗಿದ್ದು, ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಐಸಿಯು, ವೆಂಟಿಲೇಟರ್ ಹಂತದಲ್ಲಿರುವ ಕೊರೋನಾ ಸೋಂಕಿತರು ಆಕಾಶ್ ಆಸ್ಪತ್ರೆಗೆ ಬರುತ್ತಿದ್ದು, ಸೋಂಕಿತರು ಬೆಡ್ಗಾಗಿ ಅಲೆಯದೆ, ತಕ್ಷಣಕ್ಕೆ ಕೋವಿಡ್ ಕೇರ್ ಸೆಂಟರ್ ನಲ್ಲಿ ಮೊದಲು ಆರೈಕೆ ಮಾಡಿ, ನಂತರ ಬೆಡ್ ವ್ಯವಸ್ಥೆ ಮಾಡಿದಾಗ ಸೋಂಕಿತರಿಗೆ ಸಾಂತ್ವನವು ದೊರೆಯುತ್ತದೆ ಮತ್ತು ರೋಗಿಗಳಿಗೆ ಆತ್ಮವಿಶ್ವಾಸವು ಮೂಡುತ್ತದೆ ಎಂದರಲ್ಲದೆ, ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಆಕ್ಸಿಜನ್ ಫ್ಲೋ 8ಕೆಎಲ್ ನೀಡಬೇಕಿದ್ದು, ಆಕಾಶ್ ಆಸ್ಪತ್ರೆಯಲ್ಲಿರುವ ಹಾಸಿಗೆ ವ್ಯವಸ್ಥೆಗೆ ಅನುಗುಣವಾದ ಪ್ರಮಾಣದಲ್ಲಿ ಆಕ್ಸಿಜನ್ ವ್ಯವಸ್ಥೆ ಇರುವುದಾಗಿ ತಿಳಿಸಿದರಲ್ಲದೆ, ರೆಮ್ಡಿಸಿವರ್ ನೀಡುವುದರ ಬಗ್ಗೆ ಪರಿಶೀಲಿಸಿ, ಅಗತ್ಯವಿದ್ದವರಿಗೆ ಮಾತ್ರ ನೀಡಲು ಸೂಚಿಸಿರುವುದಾಗಿ ತಿಳಿಸಿದರು.
ಹೊರ ದೇಶಗಳಿಂದ ಆಕ್ಸಿಜನ್, ಲಸಿಕೆಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ರೋಗಿಗಳಿಗೆ ಔಷಧೋಪಚಾರ ಒದಗಿಸುವಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದರಲ್ಲದೆ, ಪ್ರಸ್ತುತ ಇರುವ ಮೆಡಿಸಿನ್ಅನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಬೆಂಗಳೂರು ನಗರಕ್ಕೆ ತೀರ ಹತ್ತಿರವಿದ್ದು, ಅಲ್ಲಿನ ಜನ ಇಲ್ಲಿ ವೈದ್ಯಕೀಯ ಸೇವೆ ಪಡೆಯಲು ಬರುವ ಕಾರಣ ಆಕ್ಸಿಜನ್ ಕೊರತೆ ಉಂಟಾಗತ್ತಿದೆ ಎಂದರು.
ಆಕಾಶ್ ಆಸ್ಪತ್ರೆಯಲ್ಲಿ ಜನರಲ್ ವಾರ್ಡ್ಸ್ ನಲ್ಲಿ ಬೆಡ್ ಅಲೋಟ್ಮೆಂಟ್ 330 ಇದ್ದು, ಅದರಲ್ಲಿ 245 ಕೋವಿಡ್ ರೋಗಿಗಳಿಗೆ ತೆಗೆದುಕೊಳ್ಳಲಾಗಿದ್ದು, ಇರುವ ಎಲ್ಲಾ 10 ಐಸಿಯು, 22 ಐಸಿಯು ಜೊತೆಗೆ ವೆಂಟಿಲೇಟರ್ ಹಾಗೂ ಹಾಸಿಗೆ ಜೊತೆ ಹೈ ಫ್ಲೋ ಆಕ್ಸಿಜನ್ ಇರುವ 270 ಬೆಡ್ಗಳು ಭರ್ತಿಯಾಗಿದೆ ಎಂದರು.
ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ಮಾತನಾಡಿ ಪ್ರತಿ ತಾಲ್ಲೂಕಿನಲ್ಲೂ ಸ್ಮಶಾನಕ್ಕಾಗಿ ಸ್ಥಳ ಮೀಸಲಿಡಲಾಗಿದೆ ಎಂದರು ಅಲ್ಲದೆ ಪ್ರತಿ ತಾಲ್ಲೂಕುಗಳಲ್ಲಿ ಕೋವಿಡ್ ಕೇರ್ ಸೆಂಟರ್ ಗಳನ್ನು ತೆರೆದು, 60 ರಿಂದ 70 ಆಕ್ಸಿಜನ್ ಬೆಡ್ಗಳನ್ನು ವ್ಯವಸ್ಥೆ ಮಾಡಲು ತಹಶೀಲ್ದಾರ್ಗಳಿಗೆ ತಿಳಿಸಲಾಗಿದೆ. ಎನ್.ಜಿ.ಓ.ಗಳು 100 ಹಾಸಿಗೆ ನೀಡಲು ಮುಂದಾಗಿದ್ದು, ಮೂರು ವಾರಗಳಲ್ಲಿ ದೊಡ್ಡಬಳ್ಳಾಪುರದಲ್ಲಿ ಆರಂಭಿಸಲಿದ್ದೇವೆ ಹಾಗೂ ಅದೇ ರೀತಿ ಮತ್ತೊಂದು ಎನ್.ಜಿ.ಓ. 200 ಹಾಸಿಗೆಗಳನ್ನು ನೀಡುವುದಾಗಿ ಹೇಳಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಹೆಚ್ಚು ಕೋವಿಡ್ ಪ್ರಕರಣಗಳಿರುವ 80 ಗ್ರಾಮಗಳನ್ನು ಸೀಲ್ ಡೌನ್ ಮಾಡಲಾಗಿದ್ದು, 12 ಕಡೆಗಳಲ್ಲಿ ಸೆಮಿ ಕಂಟೈನ್ಮೆಂಟ್ ಹಾಗೂ 2 ಕಡೆಗಳಲ್ಲಿ ಕಂಟೈನ್ಮೆಂಟ್ ವಲಯವನ್ನಾಗಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ನಂತರ ಜಿಲ್ಲಾ ಉಸ್ತುವಾರಿ ಸಚಿವರು ದೊಡ್ಡಬಳ್ಳಾಪುರ ತಾಲ್ಲೂಕು ಆಸ್ಪತ್ರೆ ಆವರಣಕ್ಕೆ ಭೇಟಿ ನೀಡಿ, ತಾತ್ಕಾಲಿಕವಾಗಿ 100 ಹಾಸಿಗೆಗಳ ಆಸ್ಪತ್ರೆ ಸ್ಥಾಪಿಸಲು ಉದ್ದೇಶಿಸಲಾಗಿರುವ ಸ್ಥಳವನ್ನು ಪರಿಶೀಲನೆ ಮಾಡಿದರು.
ಈ ವೇಳೆ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಅನುಕೂಲ ಕಲ್ಪಿಸಲು ಆಕ್ಸಿಜನ್ ಬೆಡ್ ಗಳ ಅಳವಡಿಸುತ್ತಿದ್ದು, ಪೂರಕವಾದ ವಸ್ತುಗಳ ಕೊರತೆ ನೀಗಿಸಲು ಪ್ರಧಾನಿ ಹಾಗೂ ಕೇಂದ್ರ ಆರೋಗ್ಯ ಸಚಿವರ ನೆರವು ದೊರಕಿಸಬೇಕೆಂದು ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ವೆಂಕಟರಮಣಯ್ಯ ಮನವಿ ಮಾಡಿದರು.
ಈ ಸಂಧರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುಳಾದೇವಿ, ತಾಲೂಕು ಆರೋಗ್ಯಾಧಿಕಾರಿ ಡಾ.ಪರಮೇಶ್ವರ ಸೇರಿದಂತೆ ಮತ್ತಿತರರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….