ದೊಡ್ಡಬಳ್ಳಾಪುರ: ಹುತಾತ್ಮ ಪಿಎಸ್ಐ ಜಗದೀಶ್ ಅವರ 5ನೇ ವರ್ಷದ ಹುತಾತ್ಮ ದಿನಾಚರಣೆಯನ್ನು ನಗರದ ಡಿ.ಕ್ರಾಸ್ ಬಳಿ ಇರುವ ಪಿಎಸ್ಐ ಜಗದೀಶ್ ವೃತ್ತದಲ್ಲಿ ಶುಕ್ರವಾರ ಅವರ ಅಭಿಮಾನಿ ಬಳಗದವತಿಯಿಂದ ನಡೆಸಲಾಯಿತು.
ಈ ವೇಳೆ ಪುಷ್ಪ ನಮನ ಸಲ್ಲಿಸಿ ಡಿವೈಎಸ್ಪಿ ಟಿ.ರಂಗಪ್ಪಮಾತನಾಡಿ, ಕರ್ತವ್ಯ ನಿರ್ವಹಣೆಯಲ್ಲಿ ಹುತಾತ್ಮರಾದ ಪಿಎಸ್ಐ ಜಗದೀಶ್ ಅವರ ಕರ್ತವ್ಯ ಹಾಗು ಜನರ ಮೇಲಿನ ಪ್ರೀತಿಯ ನೆನಪಿನಲ್ಲಿ ಇಂದು ಕಾರ್ಯಕ್ರಮ ಮಾಡುತ್ತಿರುವುದು ತುಂಬಾ ಸಂತೋಷದ ಸಂಗತಿ. ಒಬ್ಬ ನಿಷ್ಟಾವಂತ ಸಾಮಾನ್ಯ ಪೊಲೀಸ್ ಅಧಿಕಾರಿಯ ಹೆಸರಿನಲ್ಲಿ ವೃತ್ತವನ್ನು ನಿರ್ಮಾಣ ಮಾಡಿರುವುದು ಅವರ ಕರ್ತವ್ಯ ನಿಷ್ಟೆಗೆ ಹಿಡಿದ ಕೈಗನ್ನಡಿಯಾಗಿದೆ. ಅಲ್ಲದೆ ಅವರು ತಾಲೂಕಿನಲ್ಲಿ ಗಳಿಸಿರುವ ಪ್ರೀತಿ ಜನರ ಬಾವನಾತ್ಮಕ ಸಂಬಂಧಗಳ ಜೊತೆ ಅವರ ಪ್ರಾಮಾಣಿಕ ಕೆಲಸವನ್ನು ಇಂದಿಗೂ ಸ್ಮರಿಸುತ್ತಿರುವ ನಿಮಗೆ ಇಲಾಖೆವತಿಯಿಂದ ಅಭಿನಂದನೆಗಳನ್ನು ಸಲ್ಲಿಸುತ್ತಾ, ಮತ್ತೆ ಇಂತಹ ದುರಂತಗಳು ಮರುಕಳಿಸದಂತೆ ನೋಡಿಕೊಂಡು ಸಮಾಜದಲ್ಲಿರುವ ದುಷ್ಟ ಶಕ್ತಿಗಳನ್ನು ಮಟ್ಟ ಹಾಕಲು ನಾವು ಕಂಕಣ ಬದ್ದರಾಗಿದ್ದೇವೆ. ನಾಗರೀಕರು ಸಹಕಾರ ಜತೆಗೆ ಮಾಹಿತಿ ನೀಡಬೇಕಾಗಿದೆ ಎಂದರು.
ಕರವೇ ಪ್ರವೀಣ್ ಶೆಟ್ಟಿ ಬಣದ ರಾಜ್ಯ ಕಾರ್ಯದರ್ಶಿ ರಾಜಘಟ್ಟರವಿ ಮಾತನಾಡಿ, ಸಮಾಜಕ್ಕಾಗಿ ದುಡಿದವರ, ಮಡಿದವರನ್ನು ಸಮಾಜ ಎಂದು ಮರೆಯುವುದಿಲ್ಲ ಎಂಬುದಕ್ಕೆ ಕಳೆದ ಐದು ವರ್ಷಗಳಿಂದ ತಾಲೂಕಿನ ಜನತೆ ನಡೆಸುತ್ತಾ ಬಂದಿರುವ ಈ ಕಾರ್ಯಕ್ರಮ ಸಾಕ್ಷಿಯಾಗಿ. ಜಗದೀಶ್ ಅವರ ಸವಿನೆನಪಿಗಾಗಿ ನಗರದ ಡಿ.ಕ್ರಾಸ್ ಬಳಿ ಇರುವ ರೈಲ್ವೆ ಮೆಲ್ಸೆತುವೆ ವೃತ್ತವನ್ನು ಪಿಎಸ್ಐ ಜಗದೀಶ್ವೃತ್ತ ಎಂದು ನಾಮಕರಣ ಮಾಡಿ, ಪ್ರತಿ ವರ್ಷ ಅವರ ಜನ್ಮ ದಿನ ಹಾಗು ಹುತಾತ್ಮ ದಿನಾಚರಣೆಯನ್ನು ಅವರ ಅಭಿಮಾನಿಗಳು, ನಾಗರೀಕರೆಲ್ಲಾ ಸೇರಿ ಕಳೆದ ಐದು ವರ್ಷಗಳಿಂದ ಆಚರಿಸಿಕೊಂಡು ಬಂದಿರುವುದು ನೋಡಬಹುದು.
ಕಾರ್ಯಕ್ರಮದ ಅಂಗವಾಗಿ ಕರೊನಾ ಸೋಂಕು ನಿರ್ವಹಣೆಗೆ ಶ್ರಮಿಸುತ್ತಿರುವ ತಾಲೂಕು ಆರೋಗ್ಯಾಧಿಕಾರಿ ಡಾ.ಪರಮೇಶ್ವರ, ಎ ಎಸ್ ಐ ವರಲಕ್ಷ್ಮಿ, ಆಶಾ ಕಾರ್ಯಕರ್ತೆಯರಾದ ಸೋಚನಾ, ಶಶಿಕಲಾ, ಪೊಲೀಸ್ ಸಿಬ್ಬಂದಿಗಳಾದ ಬೆಟ್ಟಸ್ವಾಮಿಗೌಡ, ಶಿವಾನಂದ. ಕಾವ್ಯ, ಸುನೀಲ್ ಬಾಸಗಿ, ಪಾಂಡುರಂಗರನ್ನು ಸನ್ಮಾನಿಸಲಾಯಿತು.
ಈ ವೇಳೆ ಸರ್ಕಲ್ ಇನ್ಸ್ಪೆಕ್ಟರ್ ನವೀನ್ ಕುಮಾರ್, ಸಬ್ ಇನ್ಸ್ ಪೆಕ್ಟರ್ ಸೋಮಶೇಖರ್, ಶಂಕರಪ್ಪ, ದಿವಂಗತ ಜಗದೀಶ್ ತಾಯಿ ಕಮಲಮ್ಮ, ಮಡದಿ ರಮ್ಯ, ನಗರಸಭೆ ಸ್ಥಾಯಿಸಮಿತಿ ಮಾಜಿ ಅಧ್ಯಕ್ಷ ರೈಲ್ವೆಸ್ಟೇಷನ್ ಮಲ್ಲೇಶ್, ಕನ್ನಡ ಪಕ್ಷದ ವಿ.ಪರಮೇಶ್, ಮುಖಂಡರಾದ ಧುನಿಯಾ ಚಂದ್ರು. ಕರವೆ ಪ್ರವೀಣ್ ಶೆಟ್ಟಿ ಬಣದ ಹಮಾಮ್ ವೆಂಕಟೇಶ್, ಎಸ್ ಎಲ್ ಎನ್ ವೇಣು, ಪು.ಮಹೇಶ್ ಮತ್ತಿತರಿದ್ದರು.